Iran- Israel War: ಇರಾನ್- ಇಸ್ರೇಲ್- ಅಮೆರಿಕ ಯುದ್ಧಕ್ಕೆ ಪಾಕಿಸ್ತಾನ ಎಂಟ್ರಿ? ಮುನೀರ್ನ ಆ ಒಂದು ಭರವಸೆಯಿಂದ ಎಲ್ಲಾ ಉಲ್ಟಾ-ಪಲ್ಟಾ?
ಸೌದಿ-ಇರಾನ್ ಉದ್ವಿಗ್ನತೆ ನಡುವೆ ಪಾಕಿಸ್ತಾನದ ಪಾತ್ರದ ಬಗ್ಗೆ ಚರ್ಚೆಗಳು ಜೋರಾಗಿವೆ. ಪಾಕಿಸ್ತಾನಿ ಸೇನೆ ಇರಾನ್ ವಿರುದ್ಧ ಸೌದಿ ಅರೇಬಿಯಾಕ್ಕೆ ತನ್ನ ಬೆಂಬಲದ ಭರವಸೆ ನೀಡಿದೆ. ಈ ಮಧ್ಯೆ ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗುತ್ತೆ ಎನ್ನಲಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಸಂಘರ್ಷದ (Israel Iran War) ಉದ್ವಿಗ್ನತೆಯ ನಡುವೆ ಪಾಕಿಸ್ತಾನದ (Pakistan) ಕುರಿತು ಹಲವು ಮಹತ್ವದ ವಿಚಾರಗಳು ಹೊರಬಂದಿವೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಸೌದಿ ಅರೇಬಿಯಾಕ್ಕೆ (Saudi Arabia) ಭೇಟಿ ನೀಡಿ ಭದ್ರತಾ ಮಾತುಕತೆ ನಡೆಸಿದ್ದು, ಇರಾನ್ ಮತ್ತೆ ಸೌದಿ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನ ಇರಾನ್ ಅನ್ನು ಗುರಿಯಾಗಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯು ಸಂಘರ್ಷದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ರಕ್ಷಣಾ ಸಹಕಾರವನ್ನು ಸಕ್ರಿಯಗೊಳಿಸಲಾಗಿದ್ದು, ಪಾಕಿಸ್ತಾನದ ಆಂತರಿಕ ಸಮಸ್ಯೆಗಳ ನಡುವೆಯೂ ಇದು ಮಹತ್ವದ ಹೆಜ್ಜೆಯಾಗಿದೆ. ಅಸಿಮ್ ಮುನೀರ್ ಈ ಭರವಸೆಯಿಂದ ಯುದ್ಧಕ್ಕೆ ಎಂಟ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಈ ಭರವಸೆ ನೀಡಿದ್ದಾರೆ. ಮೂಲಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಈಗಾಗಲೇ ನೆಲೆಸಿರುವ ಪಾಕಿಸ್ತಾನದ ಸೇನಾ ಬ್ರಿಗೇಡ್ ಅನ್ನು ಸಕ್ರಿಯಗೊಳಿಸಲಾಗಿದೆ. ಪಾಕಿಸ್ತಾನ ವಾಯುಪಡೆಯು ಇರಾನ್ನಲ್ಲಿನ ಸಂಭಾವ್ಯ ಗುರಿಗಳ ಮೇಲೆ ಯುದ್ಧ ಕಾರ್ಯಾಚರಣೆ ನಡೆಸಿದೆ ಎಂದು ವರದಿಗಳು ಹೇಳುತ್ತವೆ. ಇದಕ್ಕೂ ಮೊದಲು, ಜನವರಿ 2024ರಲ್ಲಿ ಪಾಕಿಸ್ತಾನ ಇರಾನ್ನ ಸಿಸ್ತಾನ್-ಬಲೂಚಿಸ್ತಾನ್ ಪ್ರದೇಶದ ಮೇಲೆ ದಾಳಿ ನಡೆಸಿತ್ತು.
ಈ ಎಲ್ಲಾ ಬೆಳವಣಿಗೆಗಳು ಪಾಕಿಸ್ತಾನ ಸೌದಿ ಬೆಂಬಲಕ್ಕೆ ನಿಲ್ಲುವುದಾಗಿ ಸೂಚಿಸುತ್ತವೆ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಒಪ್ಪಂದವು ಇದಕ್ಕೆ ಬಲ ನೀಡಿದೆ. ಕಳೆದ ಸೆಪ್ಟೆಂಬರ್ನಲ್ಲಿ ಸಹಿ ಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಐತಿಹಾಸಿಕ ಪಾಲುದಾರಿಕೆ, ಹಂಚಿಕೆಯ ಕಾರ್ಯತಂತ್ರದ ಹಿತಾಸಕ್ತಿಗಳು ಮತ್ತು ನಿಕಟ ರಕ್ಷಣಾ ಸಹಕಾರವನ್ನು ಆಧರಿಸಿದೆ. ಒಪ್ಪಂದದ ಪ್ರಕಾರ, ಒಂದು ದೇಶದ ಮೇಲಿನ ದಾಳಿಯನ್ನು ಇನ್ನೊಂದು ದೇಶದ ಮೇಲಿನ ದಾಳಿಯಂತೆ ಪರಿಗಣಿಸಲಾಗುತ್ತದೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಸೌದಿ ಅರೇಬಿಯಾ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಅಭಿವೃದ್ಧಿಗೆ ಹಣಕಾಸು ನೀಡಿದ್ದು, ಎರಡೂ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಿದೆ. ‘ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಅಭಿವೃದ್ಧಿಪಡಿಸುವುದು ಮತ್ತು ಯಾವುದೇ ದಾಳಿಯ ವಿರುದ್ಧ ಜಂಟಿ ತಡೆಗಟ್ಟುವಿಕೆಯನ್ನು ಬಲಪಡಿಸುವುದು ಈ ಒಪ್ಪಂದದ ಉದ್ದೇಶವಾಗಿದೆ’ ಎಂದು ಜಂಟಿ ಹೇಳಿಕೆ ತಿಳಿಸಿದೆ.