ಕೃಷಿ ಜೊತೆ ಹೈನುಗಾರಿಕೆಯಿಂದ ರೈತರಿಗೆ ಸ್ವಾವಲಂಬಿ ಬದುಕು:ಕೃಷಿ ಸಚಿವ ಚಲುವರಾಯಸ್ವಾಮಿ
ನಾಗಮಂಗಲ: ಕೃಷಿ ಜೊತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ರೈತರು ಮತ್ತು ರೈತ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಚೋಳಸಂದ್ರ ಮತ್ತು ದೊಡ್ಡಾಘಟ್ಟ ಗ್ರಾಮದಲ್ಲಿ ಸ್ಥಾಪಿಸಿರುವ ಮಹಿಳಾ ನೂತನ ಡೈರಿ ಉದ್ಘಾಟಿಸಿ ಮಾತನಾಡಿದ ಸಚಿವರು, ಗ್ರಾಮೀಣ ಪ್ರದೇಶದ ರೈತರಿಗೆ ಉಳಿದೆಲ್ಲಾ ಸಂಪನ್ಮೂಲಕ್ಕಿಂತ ಹೈನುಗಾರಿಕೆ ಆರ್ಥಿಕವಾಗಿ ಹೆಚ್ಚು ಶಕ್ತಿ ಕೊಡುತ್ತದೆ ಎಂದು ಹೇಳಿದರು.
ರೈತರು ಕೃಷಿ ಜೊತೆಗೆ ಒಂದೆರಡು ಜಾನುವಾರು ಸಾಕುವುದರಿಂದ ಕುಟುಂಬ ನಿರ್ವಹಣೆಗೆ ಹಣಕಾಸಿನ ನೆರವು ಒದಗಿಸುತ್ತದೆ. ಸರ್ಕಾರ ಕೂಡ ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹ ಧನ ನೀಡುತ್ತಿರುವುದು ರೈತರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ರೈತರು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಶೀತಲೀಕರಿಸಿ ಹಾಲಿನ ಗುಣಮಟ್ಟ ಕಾಪಾಡಲು ತಾಲೂಕಿನಲ್ಲಿ 50ಕ್ಕೂ ಹೆಚ್ಚು ಬಿಎಂಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತು ಜಿಲ್ಲಾ ಹಾಲು ಒಕ್ಕೂಟ ರೈತಪರವಾಗಿದೆ. ಹೈನುಗಾರಿಕೆಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದೆ ಎಂದು ಹೇಳಿದರು.
ನಂತರ ಕೊಕ್ಕರನಹೊಸಹಳ್ಳಿ ಹಾಗೂ ಕಂಚನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆನೆರವೇರಿಸಿದರು. ಕೆಎಂಎಫ್ ನಿರ್ದೇಶಕ ಎನ್. ಅಪ್ಪಾಜಿಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಟಿ. ಕೃಷ್ಣಮೂರ್ತಿ, ದೊಡ್ಡಾಘಟ್ಟ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಡಿ.ಜಿ.ಕಾವ್ಯ, ಉಪಾಧ್ಯಕ್ಷೆ ಜಿ.ಎಸ್. ಭವ್ಯ, ಕಾರ್ಯದರ್ಶಿ ಕೆ. ಸುಪ್ರಿಯಾ, ನಿರ್ದೇಶಕರಾದ ದಿವ್ಯ, ನಾಗಮ್ಮ, ಪವಿತ್ರ, ಮಹಾಲಕ್ಷ್ಮಿ, ನಾಗಮ್ಮ, ಚೈತ್ರ ಮುಖಂಡರಾದ ಮೂರ್ತಿ, ರಾಮಚಂದ್ರ, ಶೇಖರ್ ಸೇರಿದಂತೆ ಮನ್ಮುಲ್ ನಾಗಮಂಗಲ ಉಪ ವಿಭಾಗದ ಅಧಿಕಾರಿಗಳು ಇದ್ದರು.