ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
ದಾವಣಗೆರೆ: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಒಂದು ವೇಳೆ ಜಯ ಸಾಧಿಸಿದರೆ, ಈ ಕ್ಷೇತ್ರದಲ್ಲಿ ಇನ್ನೂ 50 ವರ್ಷ ಮುಸ್ಲಿಮರಿಗೆ ಟಿಕೆಟ್ ಸಿಗುವುದಿಲ್ಲ. ಮುಸ್ಲಿಂ ಸಮುದಾಯದವರು ಎಚ್ಚೆತ್ತುಕೊಂಡು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಸಮರ್ಥ್ ಶಾಮನೂರು ಅವರಿಗೆ ಈಗ 27 ವರ್ಷ ಮಾತ್ರ. ಒಮ್ಮೆ ಗೆದ್ದರೆ ಅವರು ಈ ಕ್ಷೇತ್ರವನ್ನು ಮತ್ತೆಂದೂ ಬಿಟ್ಟುಕೊಡುವುದಿಲ್ಲ. ಮುಸ್ಲಿಂ ಸಮುದಾಯದವರು ಟಿಕೆಟ್ಗಾಗಿ 2–3 ತಲೆಮಾರು ಕಾಯಬೇಕಾಗುತ್ತದೆ. ಕಾಂಗ್ರೆಸ್ ಸೋತರೆ ಮುಂದಿನ ದಿನಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ದೊರೆಯಬಹುದು’ ಎಂದರು.
‘ಕಾಂಗ್ರೆಸ್ ಪಕ್ಷವು ದಲಿತ, ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಲಿಲ್ಲ. ಮುಸ್ಲಿಂ ಸಮುದಾಯದವರನ್ನು ಹತ್ತಿರಕ್ಕೂ ಸೇರಿಸಲಿಲ್ಲ. ತಂದೆ ಜಿಲ್ಲಾ ಉಸ್ತುವಾರಿ ಸಚಿವ, ತಾಯಿ ಸಂಸದೆ, ಇದೀಗ ಪುತ್ರ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, ಅಧಿಕಾರದ ದರ್ಪ, ದೌರ್ಜನ್ಯ ಮತ್ತಷ್ಟು ಜಾಸ್ತಿ ಆಗಲಿದೆ’ ಎಂದು ಹೇಳಿದರು.