ಹಿಂದೂ ಧರ್ಮದ ರಕ್ಷಕರು ಶಬರಿಮಲೆ ವಿಷಯದಲ್ಲಿ ಮೌನ: ಪ್ರಧಾನಿ ವಿರುದ್ಧ ರಾಹುಲ್ ಆರೋಪ
ಕಣ್ಣೂರು: ಕೇರಳದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 'ಕೇರಳದಲ್ಲಿ ಸತತ ಮೂರನೇ ಬಾರಿಗೆ ಎಲ್ಡಿಎಫ್ ಗೆಲ್ಲಬೇಕೆಂದು ಪ್ರಧಾನಿ ಮೋದಿ ಬಯಸುತ್ತಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಆರೋಪಿಸಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, 'ಎಲ್ಡಿಎಫ್ ಹಾಗೂ ಬಿಜೆಪಿಯ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೋರಾಡುತ್ತಿದೆ' ಎಂದು ಹೇಳಿದ್ದಾರೆ.
'ಈ ಚುನಾವಣೆಯು ಎರಡು ಸಿದ್ಧಾಂತಗಳ ನಡುವಣ ಸ್ಪರ್ಧೆಯಾಗಿದೆ.
ಮೊದಲ ಬಾರಿಗೆ ಬಿಜೆಪಿ ಹಾಗೂ ಎಡರಂಗದ ನಡುವೆ ಒಪ್ಪಂದ ಏರ್ಪಟ್ಟಿದೆ' ಎಂದು ಹೇಳಿದ್ದಾರೆ. 'ಸಿದ್ಧಾಂತಗಳು ಬೇರೆಯೇ ಆಗಿದ್ದರೂ ಎಡರಂಗವು ಬಲಪಂಥೀಯ ಪಕ್ಷದೊಂದಿಗೆ ಹೊಂದಾಣಿಕೆ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ' ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಿಐಐ(ಎಂ) ತೊರೆದು ಯುಡಿಎಫ್ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ವಿ. ಕುಂಞಿಕೃಷ್ಣನ್ ಹಾಗೂ ಟಿ.ಕೆ. ಗೋವಿಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
'ಎಡರಂಗವು ಕಾರ್ಪೊರೇಟ್ ಪಕ್ಷವಾಗಿರುವುದರಿಂದ ಬಿಜೆಪಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಜನಪರ ಪಕ್ಷವಾಗಿ ಉಳಿದಿಲ್ಲ. ವೇದಿಕೆಯಲ್ಲಿ ಕುಳಿತವರೇ ಇದಕ್ಕೆ ಸಾಕ್ಷಿಯಾಗಿದ್ದಾರೆ.
ಎಡಪಂಥೀಯ ಚಿಂತನೆ ಹೊಂದಿದ್ದವರೂ ಈಗ ಕಾಂಗ್ರೆಸ್ ಪರವಾಗಿದ್ದಾರೆ. ನಮ್ಮ ಪಕ್ಷವು ಅವರನ್ನು ಬೆಂಬಲಿಸುತ್ತದೆ' ಎಂದು ಹೇಳಿದ್ದಾರೆ.
'ಕೇರಳ ರಾಜಕಾರಣದಲ್ಲಿ ಬಿಜೆಪಿ ನಿಲುವನ್ನು ರಾಹುಲ್ ಪ್ರಶ್ನಿಸಿದ್ದಾರೆ. ಬೇರೆಡೆಗಳಲ್ಲಿ ಧರ್ಮ, ದೇವರ ಬಗ್ಗೆ ಮಾತನಾಡುವ ಪ್ರಧಾನಿ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಏಕೆ ಪ್ರಶ್ನೆ ಎತ್ತುತ್ತಿಲ್ಲ' ಎಂದು ಕೇಳಿದ್ದಾರೆ.
'ಶಬರಿಮಲೆ ಪ್ರಕರಣದಲ್ಲಿ ಸಿಪಿಐ(ಎಂ) ನಾಯಕರು ಭಾಗಿಯಾಗಿದ್ದಾರೆ. ಆದರೆ ಬಿಜೆಪಿ ಮೌನವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
'ಹಿಂದೂ ಧರ್ಮದ ರಕ್ಷಕರು ಎಂದು ಹೇಳುವವರು ಕೇರಳಕ್ಕೆ ಬಂದಾಗ ಶಬರಿಮಲೆ ವಿಷಯದ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದಲ್ಲಿ ಎಡರಂಗವು ಗೆಲ್ಲಬೇಕೆಂದು ಬಯಸುತ್ತಾರೆ' ಎಂದು ಟೀಕಿಸಿದ್ದಾರೆ.