Congress Politics: ಜಮೀರ್ ಅಹ್ಮದ್ ಖಾನ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಸಚಿವರು ಕೊಟ್ಟ ಸಮಜಾಯಿಷಿ ಏನು?
ಬೆಂಗಳೂರು (ಏ.14): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (By Election) ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗಳು ನಡೆದಿದೆ. ಉಪ ಚುನಾವಣೆ ಪ್ರಚಾರದಲ್ಲಿ (Election Campaign) ನಡೆದ ಘಟನೆಗಳು ಹಾಗೂ ಕೆಲ ಚಟುವಟಿಕೆಗಳ ಕುರಿತ ವರದಿ ಹೈಕಮಾಂಡ್ ಕೈಸೇರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲವಾಗ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ ಎನ್ನುವಾಗಲೇ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಜಮೀರ್ಗೆ ಬುಲಾವ್ ನೀಡಿದ್ರು. ಭೇಟಿಗೆ ಬಂದ ಜಮೀರ್ ಖಾನ್ ಮೇಲೆ ಸಿದ್ದರಾಮಯ್ಯ ಗರಂ ಆಗಿದ್ರು ಎನ್ನಲಾಗ್ತಿದೆ.
ಜಮೀರ್ ನಡೆಗೆ ಸಿಟ್ಟಾದ ಸಿದ್ದರಾಮಯ್ಯ
ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸಿಎಂ ಗರಂ ಆಗಿದ್ದರು ಎನ್ನಲಾಗ್ತಿದೆ. ನೀನು ಬಂಡಾಯಕ್ಕೆ ಪ್ರಚೋದನೆ ನೀಡಿದ್ದೀಯಾ ಎಂದು ಹೈಕಮಾಂಡ್ ನವ್ರು ಹೇಳ್ತಿದ್ದಾರೆ. ಹೈಕಮಾಂಡ್ಗೆ ನೀನೇ ಸಮಜಾಯಿಷಿ ನೀಡು ಎಂದು ಸಿಎಂ ಕೋಪದಲ್ಲೇ ನುಡಿದಿದ್ದಾರೆ ಎನ್ನಲಾಗ್ತಿದೆ.
ಸಿಎಂಗೆ ಜಮೀರ್ ಕೊಟ್ಟ ಸಮಜಾಯಿಷಿ ಏನು?
ಆ ದಿನ ನಿಮ್ಮ ಮುಂದೆಯೇ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಿ ಎಂದು ಕೇಳಿದ್ದೆ. ಜಬ್ಬಾರ್ ಬಿಟ್ಟು
ಯಾರಿಗಾದ್ರೂ ಟಿಕೆಟ್ ನೀಡಿ ಎಂದಿದ್ದೆ, ಬಳಿಕ ನಿಮ್ಮ ಮಾತಿನಂತೆ ದಾವಣಗೆರೆಗೆ ಹೋಗಿ ಸುದ್ದಿಗೋಷ್ಠಿ ನಡೆಸಿದ್ದೇವೆ. ಸಮರ್ಥ್ ಪರ ಕೆಲಸ ಮಾಡಿ ಎಂದು ಮುಖಂಡರಿಗೆ ಹೇಳಿದ್ದೇನೆ. ಆದ್ರೆ ನಮ್ಮ ಅಗತ್ಯವಿಲ್ಲ ಎಂದು ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ಗೆ ಜವಾಬ್ದಾರಿ ಕೊಟ್ರು. ನಂಗೆ ಕೇರಳದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದಿದ್ದರಿಂದ ಅಲ್ಲಿದ್ದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮೂರು ದಿನ ಬಾಂಬೆಗೆ ಹೋಗಿದ್ದೆ. ನಾವು ಪಕ್ಷದ ವಿರುದ್ದವಾಗಿ ಕೆಲಸ ಮಾಡಿಲ್ಲ ಎಂದು ಸಿಎಂಗೆ ಜಮೀರ್ ಸಮಜಾಯಿಷಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.