ಪ್ರೇಮ ಪ್ರಕರಣಗಳೆಲ್ಲಾ ಲವ್ ಜಿಹಾದ್ಗಳಲ್ಲ: ಬಿಜೆಪಿ ಆರೋಪಕ್ಕೆ ಸಂಸದ ಹಿಟ್ನಾಳ ತಿರುಗೇಟು
ಕೊಪ್ಪಳ: ಹಿಂದು-ಮುಸ್ಲಿಂ ಲವ್ ಪ್ರಕರಣಗಳೆಲ್ಲ ಲವ್ ಜಿಹಾದ್ಗಳಲ್ಲ. ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ, ಸುಮ್ಮನೇ ಆರೋಪ ಮಾಡುತ್ತಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಏನೇನೋ ಆರೋಪ ಮಾಡುವುದಲ್ಲ, ಕಾಂಗ್ರೆಸ್ ಪಕ್ಷಕ್ಕೂ ಪ್ರಕರಣಕ್ಕೂ ಏನು ಸಂಬಂಧ ಇದೆ? ಸುಮ್ಮನೆ ಎಲ್ಲದಕ್ಕೂ ಕಾಂಗ್ರೆಸ್ ದೂರುವುದಲ್ಲ. ಹಾಗೊಂದು ವೇಳೆ ಅವರಿಗೆ ಕಾಳಜಿ ಇದ್ದರೆ ಪೊಲೀಸ್ ಠಾಣೆಯಲ್ಲಿ ಇಂಥ ನೂರಾರು ಪ್ರಕರಣಗಳು ಇದ್ದು, ಪಂಚಾಯಿತಿ ಮಾಡಲಿ ಎಂದು ಕುಟುಕಿದರು.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ತಫಾ ಖಾದ್ರಿ ನಡೆಸುತ್ತಿರುವ ಲವ್ ಜಿಹಾದ್ ಹಿಂದೆ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ನೇರವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಲವ್ ಜಿಹಾದ್ ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಪ್ರೀತಿಯ ಹೆಸರಲ್ಲಿ ಬಲೆಗೆ ಬಿಳಿಸಿಕೊಂಡು ಯುವತಿಯರ ಜೀವನ ಹಾಳು ಮಾಡುವ ದಂಧೆ ಬೇರೂರಿದೆ.
ಕಳೆದೊಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ಮೂರು ಹಾಗೂ ಕೊಪ್ಪಳದಲ್ಲಿ ಒಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ಮೂಲಕ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷದಿಂದಲೇ ಲವ್ ಜಿಹಾದ್ ಪ್ರಕರಣ ನಡೆಯುತ್ತಿವೆ ಎಂದು ಹೇಳಿದರು.