Operation Sindoor: ಭಾರತ ಯಾವುದನ್ನೂ ಮರೆಯುವುದಿಲ್ಲ..: ವಿಡಿಯೋ ಹಂಚಿಕೊಂಡ ವಾಯು ಪಡೆ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಪಾಕಿಸ್ತಾನಿ ಉಗ್ರರು ನಡೆಸಿದ್ದ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ್ದ ʼಆಪರೇಶನ್ ಸಿಂದೂರʼ ಕ್ಕೆ ವರ್ಷ ತುಂಬಿದೆ. 2025ರ ಮೇ 7ರಂದು ಭಾರತದ ಗಡಿ ಭಾಗದಲ್ಲಿರುವ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ವಾಯುದಾಳಿ ನಡೆಸಿತು. ಮೇ 8 ಮತ್ತು 9ರಂದು ಭಾರತದಿಂದ ಈ ದಾಳಿ ಮುಂದುವರಿಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಪ್ರತಿದಾಳಿ ಆರಂಭಿಸಿತು. ಮೇ 10ರಂದು ಭಾರತ ನಡೆಸಿದ ಬ್ರಹ್ಮೋಸ್ ದಾಳಿಯಲ್ಲಿ ಪಾಕಿಸ್ತಾನದ ಸೇನಾನೆಲೆಗಳು ನಾಶಗೊಂಡವು. ಮೇ 11ರಂದು ದಾಳಿ ನಿಲ್ಲಿಸುವಂತೆ ಕೋರಿ ಪಾಕಿಸ್ತಾನ ಭಾರತಕ್ಕೆ ಬೇಡಿಕೆ ಸಲ್ಲಿಸಿತು.
ಬಳಿಕ 2 ಕಡೆಯ ದಾಳಿಗಳು ಮುಕ್ತಾಯಗೊಂಡವು. ಇದೀಗ ಭಾರತೀಯ ವಾಯು ಸೇನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. "ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ಹೇಳಿದ ಮಾತನ್ನು ವಿಡಿಯೋದಲ್ಲಿ ಕಾಣಬಹುದು.ವೀಡಿಯೊದ ಜೊತೆಗೆ, ಐಎಎಫ್ ಕೆಲವು ಸಾಲುಗಳನ್ನು ಬರೆದಿದ್ದು, ಭಯೋತ್ಪಾದಕರು ಎಲ್ಲಿ ಅಡಗಿಕೊಳ್ಳಲು ಆಯ್ಕೆ ಮಾಡಿಕೊಂಡರೂ ಅವರಿಗೆ ಸುರಕ್ಷಿತ ತಾಣ ಸಿಗುವುದಿಲ್ಲ ಎಂದು ಎಚ್ಚರಿಸಿದೆ, "ಆಪರೇಷನ್ ಸಿಂದೂರ್. ನ್ಯಾಯ ದೊರಕಿತು. ಕ್ರಿಯೆಯಲ್ಲಿ ನಿಖರ, ನೆನಪಿನಲ್ಲಿ ಶಾಶ್ವತ - ಆಪರೇಷನ್ ಸಿಂದೂರ್ ಮುಂದುವರಿಯುತ್ತದೆ. ಭಾರತ ಯಾವುದನ್ನೂ ಮರೆಯುವುದಿಲ್ಲ. ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ" ಎಂದು ಬರೆಯಲಾಗಿದೆ.