Tamil Nadu Politics: ತಮಿಳುನಾಡು ರಾಜಕೀಯ ಕರ್ನಾಟಕಕ್ಕೆ ಶಿಫ್ಟ್? ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ!
ತಮಿಳುನಾಡಿನಲ್ಲಿ (Tamil Nadu) ಈಗಾಗಗಲೇ ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿದೆ, ಇತ್ತ ಹೆಚ್ಚಿನ ಸೀಟ್ ಪಡೆದಿರುವ ವಿಜಯ್ ನೇತೃತ್ವದ ಟಿವಿಕೆ (Vijay TVK) ಪಕ್ಷ ಕೂಡ ಬಹುಮತ ಸಾಧಿಸಲು ಸರ್ಕಸ್ ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಟಿವಿಕೆ ಜೊತೆ ಕೈ ಜೋಡಿಸಿದ್ದರೆ. ಇನ್ನೂ ಕೆಲ ಮಿತ್ರ ಪಕ್ಷಗಳು ಹಿಂದೆ ಮುಂದೆ ನೋಡುತ್ತಿದೆ, ಈ ಮಧ್ಯೆ ತಮಿಳುನಾಡಿನ ಕಾಂಗ್ರೆಸ್ ಶಾಸಕರು (Congress MLA's) ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ ಎಂಬ ವದಂತಿಗಳು ಹರಿದಾಡಿದೆ.
ತಮಿಳುನಾಡು ರಾಜಕೀಯ ಕರ್ನಾಟಕಕ್ಕೆ ಶಿಫ್ಟ್ ಆಗಿದೆ ಎಂಬ ವದಂತಿ ಹಬ್ಬಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ತಮಿಳು ಕಾಂಗ್ರೆಸ್ನ ಕೆಲ ಶಾಸಕರು ಹೈದರಾಬಾದ್ ಅಥವಾ ಬೆಂಗಳೂರಿಗೆ ಬಂದಿದ್ದಾರೆ, ಅವರನ್ನು ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ ಎಂಬ ವದಂತಿಗೆ ಡಿ.ಕೆ ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಡಿಕೆಶಿ ಅವರ ಮಾತಿನ ಪ್ರಕಾರ, ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂಬುದು ಸತ್ಯವಲ್ಲ. ‘ತಮಿಳು ಕಾಂಗ್ರೆಸ್ ಶಾಸಕರು ರಾಜ್ಯಕ್ಕೆ ಶಿಫ್ಟ್ ಆಗಿಲ್ಲ. ಕೆಲವರು ಹೈದರಾಬಾದ್ಗೆ, ಕೆಲವರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂದು ಹೇಳ್ತಿದ್ದಾರೆ. ಆದರೆ ನನಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೈಕಮಾಂಡ್ ಕೂಡಾ ನನಗೆ ಈ ಬಗ್ಗೆ ಏನೂ ಹೇಳಿಲ್ಲ’ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಅದಕ್ಕಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಮಾತುಗಳು ಬಂದಿದ್ದರೂ, ಡಿಕೆಶಿ ಅವರು ಅದನ್ನೂ ತಳ್ಳಿಹಾಕಿದ್ದಾರೆ. ‘ತಮಿಳುನಾಡು ಕಾಂಗ್ರೆಸ್ನ 5 ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎನ್ನುವ ವದಂತಿ ಸಂಪೂರ್ಣ ಸುಳ್ಳು. ಯಾರೂ ಈಗಲ್ಟನ್ ರೆಸಾರ್ಟ್ಗೆ ಬಂದಿಲ್ಲ. ಈಗಲ್ಟನ್ ಮುಚ್ಚಿದೆ. ಇದೆಲ್ಲಾ ಸುಳ್ಳೇ’ ಎಂದು ಅವರು ಹೇಳಿದರು. ಜೊತೆಗೆ ರೆಸಾರ್ಟ್ ರಾಜಕಾರಣದ ಬಗ್ಗೆ ಹರಿದಾಡುತ್ತಿರುವ ಮಾತುಗಳನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
‘ಅದೆಲ್ಲಾ ಸುಳ್ಳು. ಯಾವ ಶಾಸಕರು ಈಗಲ್ಟನ್ ರೆಸಾರ್ಟ್ಗೆ ಬಂದಿಲ್ಲ. ನನಗೇನಾದರೂ ಹೈಕಮಾಂಡ್ ಹೇಳಿದ್ದರೆ, ನಾನು ನೇರವಾಗಿ ಹೇಳ್ತಿದ್ದೆ. ಆದರೆ ಈ ವಿಷಯದಲ್ಲಿ ನನಗೆ ಯಾವುದೇ ಸೂಚನೆ ಇಲ್ಲ’ ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಅವರ ಪ್ರಕಾರ, ಹೈಕಮಾಂಡ್ ಅವರು ತಮ್ಮನ್ನು ಕೇವಲ ಪಕ್ಷದ ಪ್ರಚಾರ ಕೆಲಸಗಳಿಗೆ ಮಾತ್ರ ಬಳಸಿದೆ. ‘ನನಗೆ ಪ್ರಚಾರಕ್ಕೆ ಹೋಗಲು ಹೇಳಿದ್ದರು, ನಾನು ಹೋಗಿದ್ದೆ. ಮ್ಯಾನಿಫೆಸ್ಟೊ ಬಿಡುಗಡೆ ಮಾಡಲು ಹೇಳಿದರು, ಹೋಗಿದ್ದೆ. ಅದನ್ನು ಹೊರತುಪಡಿಸಿ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಅಥವಾ ಶಾಸಕರ ಶಿಫ್ಟ್ ಬಗ್ಗೆ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ’ ಎಂದು ಅವರು ತಿಳಿಸಿದರು.