ತೈಲ ಉಳಿತಾಯಕ್ಕೆ ಬಿಹಾರ ಸಿಎಂ ಮಾದರಿ ಹೆಜ್ಜೆ: ವಾರಕ್ಕೊಂದು ದಿನ 'ವಾಹನ ಮುಕ್ತ ದಿನ'ಕ್ಕೆ ಕರೆ!
ಪಾಟ್ನಾ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ದಿಟ್ಟ ಕ್ರಮಗಳನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 'ಸರಳತೆ ಮತ್ತು ಉಳಿತಾಯ'ದ ಕರೆಗೆ ಓಗೊಟ್ಟಿರುವ ಅವರು, ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ ಮಿತವ್ಯಯಕ್ಕೆ ನಾಂದಿ ಹಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಪ್ರಧಾನಿಯವರು ಇಂಧನ ಉಳಿತಾಯಕ್ಕೆ ಕರೆ ನೀಡಿದ್ದಾರೆ. ಇದನ್ನು ಪಾಲಿಸುವುದು ನಮ್ಮ ಜವಾಬ್ದಾರಿ.
ಹೀಗಾಗಿ ನನ್ನ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ, ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಬಿಹಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಮ್ರಾಟ್ ಚೌಧರಿ, ಈಗ ಆಡಳಿತದಲ್ಲಿ ಶಿಸ್ತು ತರಲು ಮುಂದಾಗಿದ್ದಾರೆ. ಕೇವಲ ತಮ್ಮ ಕಾನ್ವಾಯ್ ಮಾತ್ರವಲ್ಲದೆ, ಸಚಿವರು, ಮಹಾನಗರ ಪಾಲಿಕೆಗಳ ಅಧ್ಯಕ್ಷರು ಮತ್ತು ಇತರ ಜನಪ್ರತಿನಿಧಿಗಳು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವಾಗ ಹೆಚ್ಚುವರಿ ಎಸ್ಕಾರ್ಟ್ ವಾಹನಗಳನ್ನು ಬಳಸದಂತೆ ಅವರು ಮನವಿ ಮಾಡಿದ್ದಾರೆ. ಜನರು ಕೂಡ ವೈಯಕ್ತಿಕ ವಾಹನಗಳ ಬದಲಿಗೆ ಬಸ್, ಮೆಟ್ರೋ ಹಾಗೂ ಆಟೋ ರಿಕ್ಷಾಗಳಂತಹ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕು ಎಂದು ಅವರು ಆಶಿಸಿದ್ದಾರೆ.