ಯುಪಿ ಚಂಡಮಾರುತಕ್ಕೆ 54 ಮಂದಿ ಬಲಿ: ಪರಿಹಾರ ಕಾರ್ಯಕ್ಕೆ ಅಖಿಲೇಶ್ ಯಾದವ್ ಒತ್ತಾಯ
ಲಕ್ನೋ: ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಮಳೆ ಸಂಬಂಧಿತ ಅವಘಡಗಳಲ್ಲಿ ಸುಮಾರು 54 ಮಂದಿ ಸಾವನ್ನಪ್ಪಿರುವ ಘಟನೆಗೆ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರವು ತಕ್ಷಣವೇ 'ಯುದ್ಧೋಪಾದಿಯಲ್ಲಿ' ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭದೋಹಿ, ಫತೇಪುರ್, ಸೋನಭದ್ರಾ, ಬದೌನ್ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬೀಸಿದ ವೇಗವಾದ ಗಾಳಿ ಮತ್ತು ಚಂಡಮಾರುತಕ್ಕೆ 54 ಜನರು ಬಲಿಯಾಗಿರುವುದು "ಅತ್ಯಂತ ದುಃಖಕರ" ಸಂಗತಿ ಎಂದು ಹೇಳಿದ್ದಾರೆ.
ಮನೆ ಕುಸಿತ, ಮರಗಳು ಉರುಳಿರುವುದು ಮತ್ತು ಗೋಡೆ ಕುಸಿತದಂತಹ ಘಟನೆಗಳಿಂದ ಲಕ್ಷಾಂತರ ಜನರು ಬೀದಿ ಪಾಲಾಗಿದ್ದಾರೆ. ಸಂತ್ರಸ್ತರಿಗೆ ತಕ್ಷಣವೇ ತಾತ್ಕಾಲಿಕ ವಸತಿ, ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಪರಿಹಾರಕ್ಕೆ ಆಗ್ರಹ: ಗಾಯಾಳುಗಳಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಮೃತರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಲು ವ್ಯವಸ್ಥೆ ಮಾಡಬೇಕು. ಜೊತೆಗೆ ಆಸ್ತಿಪಾಸ್ತಿ, ಬೆಳೆ ಮತ್ತು ವಾಹನಗಳಿಗೆ ಆಗಿರುವ ಹಾನಿಯನ್ನು ಶೀಘ್ರವಾಗಿ ಅಂದಾಜು ಮಾಡಿ, ಸಂತ್ರಸ್ತರಿಗೆ ವಿಮೆ ಮತ್ತು ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.