Tamil Nadu Politics: ದಳಪತಿ ವಿಜಯ್ ಬೆಂಬಲಿಸಿದ್ದಕ್ಕಾಗಿ 25 AIADMK ಶಾಸಕರಿಗೆ ಸಂಕಷ್ಟ! ಅನರ್ಹತೆಯ ತೂಗುಗತ್ತಿ, ಮತ್ತೆ ಚುನಾವಣೆ?
ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ರಾಜಕೀಯ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಇತ್ತೀಚಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿ, ಹಲವು ಪಕ್ಷಗಳ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ. ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), CPI, CPI(M) ಮತ್ತು VCK ಸೇರಿ ಒಟ್ಟು 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ಸ್ಥಾಪನೆಯಾಯಿತು. ನಂತರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ದಳಪತಿ ವಿಜಯ್ ಸರ್ಕಾರಕ್ಕೆ 144 ಶಾಸಕರ ಬೆಂಬಲ ದೊರೆಯಿತು. ಇದರಿಂದ ಅವರ ಸರ್ಕಾರದ ಮೇಲೆ ತಕ್ಷಣದ ಯಾವುದೇ ರಾಜಕೀಯ ಅಪಾಯ ಇಲ್ಲದಂತಾಗಿದೆ.
ಆದರೆ ಈ ಯಶಸ್ಸಿನ ಹಿಂದೆ ಒಂದು ದೊಡ್ಡ ಸಂಕಷ್ಟ ಅಡಗಿದೆ. ಅದು AIADMK ಪಕ್ಷದ ಬಂಡಾಯ ಶಾಸಕರ ಬಗ್ಗೆ. ಒಟ್ಟು 25 AIADMK ಶಾಸಕರು ತಮ್ಮ ಪಕ್ಷದ ಅಧಿಕೃತ ನಾಯಕತ್ವದ ವಿರುದ್ಧ ಬಂಡಾಯ ಮಾಡಿ, ದಳಪತಿ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಈಗ ಅವರಿಗೆ ಸಂಕಷ್ಟ ಎದುರಾಗಿದೆ. AIADMK ಪಕ್ಷದ ಈ ಬಂಡಾಯ ಬಣವನ್ನು SP ವೇಲುಮಣಿ ಮತ್ತು CV ಷಣ್ಮುಗಂ ಮುನ್ನಡೆಸುತ್ತಿದ್ದಾರೆ. AIADMK ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರ ಮೇಲೆ, ಸ್ಟಾಲಿನ್ ನೇತೃತ್ವದ DMK ಜೊತೆ ಕೈಜೋಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿ, ಈ ಬಂಡಾಯ ಶಾಸಕರು TVK ಸರ್ಕಾರಕ್ಕೆ ಹೊರಗಿನ ಬೆಂಬಲ ನೀಡಿದರು. ಇದಕ್ಕೆ ಪ್ರತಿಯಾಗಿ ಪಳನಿಸ್ವಾಮಿ, ಈ 25 ಶಾಸಕರನ್ನೂ ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕಿದ್ದಾರೆ.