ಬಿಟ್ಟು ಹೋಗುವವರು ಹೋಗಲಿ, ಪಕ್ಷ ಮತ್ತೆ ಕಟ್ಟೋಣ: TMC ಮುಖ್ಯಸ್ಥೆ ಮಮತಾ ಬ್ಯಾನರ್ಜಿ
ಕೋಲ್ಕತ್ತ: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ. ಕಾಳಿಘಾಟ್ ನಿವಾಸದಲ್ಲಿ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ, ಬೇರೆ ಪಕ್ಷಗಳಿಗೆ ಹೋಗುತ್ತಿರುವರನ್ನು ಹೋಗಲು ಬಿಡಿ. ಪಕ್ಷವನ್ನು ಮತ್ತೆ ಕಟ್ಟೋಣ. ಪಕ್ಷದಲ್ಲಿಯೇ ಉಳಿಯುವವರು ಧೃತಿಗೆಡದೆ ಕೆಲಸ ಆರಂಭಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಮುಚ್ಚಿಹೋಗಿರುವ ಅಥವಾ ಹಾನಿಗೊಳಗಾದ ಪಕ್ಷದ ಕಚೇರಿಗಳಿಗೆ ಬಣ್ಣ ಬಳಿದು ಮತ್ತೆ ತೆರೆಯಿರಿ. ಅಗತ್ಯ ಬಿದ್ದರೆ ನಾನೇ ಬಂದು ಕಚೇರಿಗಳಿಗೆ ಬಣ್ಣ ಬಳಿಯುತ್ತೇನೆ ಎಂದು ಅವರು ಪಕ್ಷದ ನಾಯಕರಲ್ಲಿ ಉತ್ಸಾಹ ತುಂಬಿದ್ದಾರೆ. ತೃಣಮೂಲ ಕಾಂಗ್ರೆಸ್ ಸೋತಿಲ್ಲ. ಆದರೆ ಜನರ ಆದೇಶವನ್ನು (ಮತಗಳನ್ನು) ಲೂಟಿ ಮಾಡಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೀನಾಯ ಸೋಲನುಭವಿಸಿದೆ.
294 ಸ್ಥಾನಗಳ ಪೈಕಿ ಪಕ್ಷ ಕೇವಲ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಮತಾ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಭವಾನಿಪುರದಲ್ಲಿ ಅವರು ಸೋಲನುಭವಿಸಿದ್ದರು. ಈ ಸೋಲಿನ ಬಳಿಕ ಪಕ್ಷದಲ್ಲಿ ಭಿನ್ನಮತ ಎದ್ದಿದ್ದು, ಹಲವು ನಾಯಕರು ಪಕ್ಷ ತೊರೆಯಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಮತಾ ಅವರು ಶನಿವಾರ ತಮ್ಮ ನಿವಾಸದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಭೆ ಕರೆದಿದ್ದರು.