India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು!
ನವದೆಹಲಿ: ಭಾರತ ದೇಶ ಕಳೆದ ಕೆಲ ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ ಮಧ್ಯಪ್ರಾಚ್ಯದಲ್ಲಿನ (Middle East Crisis) ಯುದ್ಧದ ಭೀತಿ ಅನ್ನೋದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗಂತೂ ಬೆಳಗ್ಗೆ ಎದ್ದ ತಕ್ಷಣ ಯಾವ ಬೆಲೆ ಏರಿಕೆಯಾಗಿದೆ ಎಂದು ನೋಡೋವಷ್ಟರ ಮಟ್ಟಿಗೆ ಜನರಿಗೆ ಆತಂಕ ಶುರುವಾಗಿದೆ. ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ.
ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯುಎಸ್ ಷೇರು ಮಾರುಕಟ್ಟೆ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದರೂ, ಭಾರತೀಯ ಮಾರುಕಟ್ಟೆ ತೀವ್ರ ಕುಸಿತ ಕಾಣುತ್ತದೆ. ಜೊತೆಗೆ ಜಿಡಿಪಿ ಬೆಳವಣಿಗೆಯೂ ನಿಧಾನವಾಗುತ್ತದೆ.
ಆದರೆ ಜಗತ್ತಿನ ಪ್ರತಿಯೊಂದು ಯುದ್ಧಕ್ಕೂ ಭಾರತ ಏಕೆ ಬೆಲೆ ತೆರಬೇಕು? ಇದರ ಹಿಂದಿನ ನಿಜವಾದ ಕಾರಣಗಳೇನು, ಮತ್ತು ಈ ಸಂಕಷ್ಟದಿಂದ ಹೊರಬರುವ ಮಾರ್ಗವೇನು? ಇದು ಮೊದಲ ಬಾರಿಗೆ ಸಂಭವಿಸಿದ್ದೂ ಅಲ್ಲ, ಇದರ ಹಿಂದೆ ಯಾವುದೇ ಕಾಕತಾಳೀಯವೂ ಅಡಗಿಲ್ಲ. ಆದರೆ ಪ್ರಸ್ತುತ, ಈ ಬೆಳವಣಿಗೆಗಳು ನಾಲ್ಕು ಪ್ರಮುಖ ಕಾರಣಗಳು ನಮ್ಮ ಮುಂದೆ ಕಾಣುತ್ತವೆ. ಕಚ್ಚಾ ತೈಲ ಭಾರತವು ತನ್ನ ಕಚ್ಚಾ ತೈಲದ ಅಗತ್ಯದ ಸರಿಸುಮಾರು 85% ಅನ್ನು ವಿದೇಶಗಳಿಂದ ಖರೀದಿಸುತ್ತದೆ. ಮೂಲಭೂತವಾಗಿ, ಭಾರತದ ಆರ್ಥಿಕತೆಯು ತೈಲದ ಮೇಲೆ ಅವಲಂಬಿತವಾಗಿದೆ. ಪಶ್ಚಿಮ ಏಷ್ಯಾದಲ್ಲಿ ಅಥವಾ ಹಾರ್ಮುಜ್ ಜಲಸಂಧಿಯಂತಹ ಸಮುದ್ರ ಮಾರ್ಗಗಳಲ್ಲಿ ಉದ್ವಿಗ್ನತೆ ಉಂಟಾದಾಗಲೆಲ್ಲಾ, ತೈಲ ಬೆಲೆಗಳು ಗಗನಕ್ಕೇರುತ್ತವೆ, ಇದರಿಂದ ಭಾರತವು ಅಸಹಾಯಕವಾಗುತ್ತದೆ.