ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರಿಕೆ
ನವದೆಹಲಿ: ಶೃಂಗೇರಿ ಶಾಸಕರಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರ ಮುಂದುವರಿಕೆ ಸಂಬಂಧ ನೀಡಿದ್ದ ಮಧ್ಯಂತರ ಆದೇಶದ ಮುಂದುರಿಕೆಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ. ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು ಚುನಾಯಿತ ಎಂದು ಚುನಾವಣಾ ಆಯೋಗ ಘೋಷಿಸಿ ಪ್ರಮಾಣವಚನ ಬೋಧಿಸಿದ್ದರೂ, ಕಾಂಗ್ರೆಸ್ ನಾಯಕ ರಾಜೇಗೌಡ ಅವರಿಗೆ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರ ನ್ಯಾಯಪೀಠ ಕಳೆದವಾರ ಮಧ್ಯಂತರ ಪರಿಹಾರ ನೀಡಿತ್ತು. ಸದ್ಯಕ್ಕೆ ಕ್ಷೇತ್ರದ ರಾಜೇಗೌಡ ಶಾಸಕರಾಗಿ ಉಳಿಯಬೇಕೆಂದು ಆದೇಶಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಜೀವರಾಜ್ ಅವರನ್ನು 201 ಮತಗಳ ಅಂತರದಿಂದ ಸೋಲಿಸಿದ್ದರು.
1,811 ಅಂಚೆಮತಗಳು ಚಲಾವಣೆಯಾಗಿದ್ದವು. ರಾಜೇಗೌಡ ಅವರ ಸಮೀಪದ ಪ್ರತಿಸ್ಪರ್ಧಿ ಜೀವರಾಜ್ ಹೈಕೋರ್ಟ್ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ, ‘1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತ ಚುನಾವಣಾ ಆಯೋಗ ಹೊರಡಿಸಿದ ಚುನಾವಣಾ ಅಧಿಕಾರಿಯ ಕೈಪಿಡಿಯ ನಿಬಂಧನೆಗಳ ಪ್ರಕಾರ, ಪ್ರತಿವಾದಿ ವಿಜೇತ ಅಭ್ಯರ್ಥಿಯು ಚುನಾವಣೆಯಲ್ಲಿ ಎಸಗಿರುವ ದುಷ್ಕೃತ್ಯಗಳು, ಅಪರಾಧಗಳು, ಅನೈತಿಕ ಕೃತ್ಯಗಳು ಮತ್ತು ಲೋಪಗಳ ಆರೋಪಗಳನ್ನು ಪರಿಗಣಿಸಬೇಕು. ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ಕಾನೂನಿನ ಪ್ರಕಾರ ಮರು ಎಣಿಕೆ ಮಾಡಲು ಆದೇಶಿಸಿ ಫಲಿತಾಂಶವನ್ನು ಹೊಸದಾಗಿ ಘೋಷಿಸಲು ಆದೇಶಿಸಬೇಕು’ ಎಂದು ಕೋರಿದ್ದರು.