Select Location
All Locations
State
Region
City / District
ರಾಹುಲ್‌ ಪ್ರವಾಸ 3 ದಿನ ವಿಸ್ತರಣೆ 3 ದಿನ ತಡವಾಗಿ ಡಿಕೆ, ಸಿದ್ದು ದೆಹಲಿ ಯಾತ್ರೆ

ರಾಹುಲ್‌ ಪ್ರವಾಸ 3 ದಿನ ವಿಸ್ತರಣೆ 3 ದಿನ ತಡವಾಗಿ ಡಿಕೆ, ಸಿದ್ದು ದೆಹಲಿ ಯಾತ್ರೆ

ಬೆಂಗಳೂರು : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿದೇಶ ಪ್ರವಾಸ ವಿಸ್ತರಣೆಯಾಗಿದ್ದು, ಜು.5ರ ಬದಲಿಗೆ ಜು.9 ರಂದು ದೆಹಲಿಗೆ ವಾಪಸ್‌ ಬರಲಿದ್ದಾರೆ. ಇದರಿಂದಾಗಿ ಜು.5 ರಂದು ನಿಗದಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿ ಸದಸ್ಯ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಮೂರು ದಿನ ಮುಂದೂಡಿಕೆಯಾಗಿದೆ.

ಮೊದಲಿಗೆ ಜು.5ರಂದು ರಾಹುಲ್‌ ಗಾಂಧಿ ಅವರು ವಿದೇಶದಿಂದ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಾಹುಲ್‌ ಅವರ ವಿದೇಶ ಪ್ರವಾಸ ಮೂರು ದಿನ ವಿಸ್ತರಣೆಯಾಗಿದೆ. ಹೀಗಾಗಿ ಜು.8 ರಂದು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ನಾಯಕರು ಜಿಲ್ಲಾವಾರು, ಸಮುದಾಯವಾರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ರಾಷ್ಟ್ರ ರಾಜಧಾನಿಗೆ ತೆರಳುವ ಸಾಧ್ಯತೆಯಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ

ಜು.9 ಅಥವಾ 10 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲಾ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ.ಎಲ್ಲಾ ಅಂದುಕೊಂಡಂತೆ ನಡೆದರೆ ಆಷಾಢಕ್ಕೂ ಮೊದಲು ಅಂದರೆ ಜು.14ರ ವೇಳೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪರಿಷತ್‌ ನಾಮನಿರ್ದೇಶನ ಬಗ್ಗೆಯೂ ಚರ್ಚೆ:

ಇದೇ ವೇಳೆ ಜು.22ರಂದು ಅವಧಿ ಪೂರ್ಣಗೊಳ್ಳಲಿರುವ ವಿಧಾನ ಪರಿಷತ್‌ನ ಐದು ನಾಮನಿರ್ದೇಶಿತ ಸದಸ್ಯರ ಸ್ಥಾನಗಳಿಗೆ ಯಾರನ್ನು ನಾಮನಿರ್ದೇಶನ ಮಾಡಬೇಕು ಎಂಬ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಹಾಗೂ ಪರಿಷತ್‌ ಸದಸ್ಯ ಸ್ಥಾನಗಳಿಗೆ ಲಾಬಿ ಮುಂದುವರೆದಿದೆ.


Kannadapraba 1 hour ago
Home Flash News