ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಕಾಲ ಬುಡಕ್ಕೆ ಬಂದರೂ ಪ್ರಧಾನಿ ಮೋದಿ ಮೌನ: ರಾಹುಲ್ ಆಕ್ರೋಶ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿ ಈಗ ಭಾರತದ ಕಾಲ ಬುಡಕ್ಕೆ ಬಂದು ತಲುಪಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ದೇಶಕ್ಕೆ ಈಗ ದೃಢವಾದ ನಾಯಕತ್ವದ ಅಗತ್ಯವಿದೆ, ಆದರೆ ನಮ್ಮ ಪ್ರಧಾನಿ ದೇಶದ 'ವ್ಯೂಹಾತ್ಮಕ ಸ್ವಾಯತ್ತತೆ'ಯನ್ನು ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಗುರುವಾರ ಈ ಕುರಿತು 'X' (ಎಕ್ಸ್ ) ಮೂಲಕ ಕಿಡಿಕಾರಿದ ರಾಹುಲ್ ಗಾಂಧಿ, "ಜಗತ್ತು ಈಗ ಅತ್ಯಂತ ಅಸ್ಥಿರ ಘಟ್ಟದಲ್ಲಿದೆ. ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿರಲಿವೆ. ಭಾರತದ ಶೇ. 40ಕ್ಕೂ ಹೆಚ್ಚು ತೈಲ ಆಮದು 'ಹಾರ್ಮುಜ್ ಜಲಸಂಧಿ'ಯ ಮೂಲಕವೇ ಸಾಗುತ್ತದೆ.
ಎಲ್ಪಿಜಿ ಮತ್ತು ಎಲ್ಎನ್ಜಿ ಪೂರೈಕೆಯ ಸ್ಥಿತಿಯಂತೂ ಇನ್ನೂ ಗಂಭೀರವಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿತ್ತಲಿಗೆ ಬಂದ ಯುದ್ಧದ ಕಿಡಿ
ಶ್ರೀಲಂಕಾ ಕರಾವಳಿಯ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ಹೊಡೆದುರುಳಿಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, "ಯುದ್ಧವು ಈಗ ನಮ್ಮ ಹಿತ್ತಲಿಗೇ ಬಂದಿದೆ. ಹಿಂದೂ ಮಹಾಸಾಗರದಲ್ಲಿ ಇರಾನ್ ಹಡಗು ಮುಳುಗಿದರೂ ಪ್ರಧಾನಿಗಳು ಚಕಾರ ಎತ್ತುತ್ತಿಲ್ಲ. ಭಾರತವನ್ನು ಕೈಹಿಡಿದು ನಡೆಸಲು ಸಮರ್ಥ ನಾಯಕನ ಅಗತ್ಯವಿರುವ ಈ ಸಂದರ್ಭದಲ್ಲಿ, ನಾವು ಅಸಮರ್ಥ ಪ್ರಧಾನಿಯನ್ನು ಹೊಂದಿದ್ದೇವೆ" ಎಂದು ಕುಟುಕಿದ್ದಾರೆ.
ಇರಾನ್ ನೌಕೆ ಮುಳುಗಡೆ: ಭಾರತ ಆಯೋಜಿಸಿದ್ದ 'ಮಿಲನ್' ನೌಕಾ ಸಮರಭ್ಯಾಸ ಮುಗಿಸಿ ಹಿಂದಿರುಗುತ್ತಿದ್ದ ಇರಾನ್ನ 'ಐರಿಸ್ ದೇನಾ' ನೌಕೆಯನ್ನು ಅಮೆರಿಕ ಹೊಡೆದುರುಳಿಸಿದೆ.