ಬಾಗಲಕೋಟೆ ಉಪ ಚುನಾವಣೆ: ಬಿಜೆಪಿ ಪರ ಪ್ರಚಾರಕ್ಕೆ ಯತ್ನಾಳಗೆ ಸಿಕ್ಕಿತಾ ಸಮ್ಮತಿ?
ಬಾಗಲಕೋಟೆ: ‘ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಬಿಜೆಪಿ ನಾಯಕರು ಪರೋಕ್ಷವಾಗಿ ಸಮ್ಮತಿ ನೀಡಿದ್ದಾರಾ’ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ. ನಾಮಪತ್ರ ಸಲ್ಲಿಕೆ ದಿನ ಬೃಹತ್ ರ್ಯಾಲಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ ಕೆಲ ಕಾರ್ಯಕರ್ತರು ‘ಮುಂದಿನ ಸಿಎಂ ಯತ್ನಾಳ’ ಎಂಬ ಭಿತ್ತಿಚಿತ್ರ ಪ್ರದರ್ಶಿಸಿದ್ದರು.
ಕೂಡಲೇ ಕೆಲ ನಾಯಕರು ಅದನ್ನು ಕಸಿದುಕೊಂಡಿದ್ದರು.
ನಂತರ ದಿನಗಳಲ್ಲೂ ಯುವಕರ, ಹಿಂದುತ್ವದ ಪರ ಒಲವುಳ್ಳವರ ಮತ ಸೆಳೆಯಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪ್ರಚಾರಕ್ಕೆ ಕರೆಯಿಸಬೇಕು ಎಂಬ ಕೂಗು ಪಕ್ಷದ ವೇದಿಕೆಗಳಲ್ಲಿ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ಯತ್ನಾಳ ಅವರೂ, ‘ವೀರಣ್ಣ ಚರಂತಿಮಠ ಹಲವು ಸಂದರ್ಭಗಳಲ್ಲಿ ನೆರವು ನೀಡಿದ್ದಾರೆ. ನಮ್ಮಿಬ್ಬರದು ಬಹಳ ಹಳೆಯ ಸಂಬಂಧ. ಅವಶ್ಯಕತೆ ಬಿದ್ದರೆ ನೋಡೋಣ’ ಎಂದಿದ್ದರು.