West Bengal: ಬಂಗಾಳದಲ್ಲಿ ಹಲವು TMC ಕಚೇರಿಗಳ ಮೇಲೆ ದಾಳಿ, ದೀದಿ ನಿವಾಸದ ಮುಂದೆ ‘ಜೈ ಶ್ರೀರಾಮ್ ಘೋಷಣೆ’
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (TMC) ಈ ಬಾರಿ ಸೋಲುಂಟಾಗಿದ್ದು, ಬಿಜೆಪಿ ಪಕ್ಷ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ಕಾರ್ಯಕರ್ತರು ನಿನ್ನೆಯಿಂದ ವಿಜಯೋತ್ಸವ ಆಚರಿಸುತ್ತಿದ್ದು, ಈ ಮಧ್ಯೆ ಟಿಎಂಸಿ ಕಚೇರಿಗಳ (TMC Office Attacked) ಮೇಲೆ ದಾಳಿ ಮಾಡಿ ಬೆಂಕಿ ಹಚ್ಚುವ ಕೃತ್ಯಗಳು ನಡೆದಿದೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನದಿಂದ ಕೋಲ್ಕತ್ತಾದ ಟಾಲಿಗಂಜ್ ಮತ್ತು ಕಸ್ಬಾ, ಉಪನಗರಗಳ ಬರುಯಿಪುರ, ಕಮರ್ಹತಿ, ಬಾರಾನಗರ ಮತ್ತು ಜಿಲ್ಲೆಗಳ ಹೌರಾ ಮತ್ತು ಬಹರಂಪುರದಲ್ಲಿರುವ ಟಿಎಂಸಿ ಕಚೇರಿಗಳ ಮೇಲೆ ಕಿಡಿಗೇಡಿಗಳ ಗುಂಪುಗಳು ದಾಳಿ ಮಾಡಿ ಕಚೇರಿಯನ್ನು ಧ್ವಂಸಗೊಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗೂಂಡಾಗಿರಿಯನ್ನು ಬಿಜೆಪಿ ಕಾರ್ಯಕರ್ತರೇ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ಸಂಬಂಧ ಸಾಕ್ಷ್ಯಗಳನ್ನು ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಟಿಎಂಸಿ ಪೋಸ್ಟ್ ಮಾಡಿದೆ.
ಟಿಎಂಸಿ ತನ್ನ ಅಸನ್ಸೋಲ್ ಕಚೇರಿಯಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ತೋರಿಸುವ ವೀಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಅಧಿಕಾರದ ದುರಹಂಕಾರದಿಂದ ಪ್ರಜಾಪ್ರಭುತ್ವವನ್ನು ತುಳಿಯುವ ಬಿಜೆಪಿಯ ಕೊಳಕು ಆಟ ಪ್ರಾರಂಭವಾಗಿದೆ. ಫಲಿತಾಂಶಗಳು ಹೊರಬಂದ ತಕ್ಷಣ, 'ಕೇಸರಿ ಬ್ರಿಗೇಡ್' ತನ್ನ ನಿಜವಾದ ಬಣ್ಣಗಳನ್ನು ತೋರಿಸುತ್ತಿದೆ. ಅಸನ್ಸೋಲ್ ಟಿಎಂಸಿ ಕಚೇರಿಯಲ್ಲಿ ನಡೆದ ವಿಧ್ವಂಸಕ ಕೃತ್ಯವು ಅವರಿಗೆ ಪ್ರಜಾಪ್ರಭುತ್ವ ಮೌಲ್ಯಗಳು ಅಥವಾ ಮೂಲಭೂತ ಸಭ್ಯತೆಯ ಬಗ್ಗೆ ಶೂನ್ಯ ಗೌರವವಿದೆ ಎಂದು ಸಾಬೀತುಪಡಿಸುತ್ತದೆ. ‘ಗೋದಿ ಮಾಧ್ಯಮ' ಈಗ ಎಲ್ಲಿದೆ? ಟಿಎಂಸಿ ಗುರಿಯಾಗಿರುವಾಗ ‘ಚುನಾವಣಾ ನಂತರದ ಹಿಂಸಾಚಾರ’ ನಿರೂಪಣೆ ಏಕೆ ಮೌನವಾಗಿದೆ? ನಮ್ಮ ಮೇಲೆ ದಾಳಿಯಾದಾಗ ಮಾತ್ರ ಮಾಧ್ಯಮದ ಶಾಯಿ ಒಣಗುತ್ತದೆಯೇ?’ ಎಂದು ಟಿಎಂಸಿ ಬರೆದುಕೊಂಡಿದೆ.