ಅಮ್ಮ..ನಿನ್ನ ಮೇಲಾಣೆ.. ತಪ್ಪು ಮಾಡಿರಬಹುದು, ಇನ್ನು ಮುಂದೆ ನಿನ್ನ ಹಾದಿಯಲ್ಲೇ ಬದುಕುತ್ತೇನೆ': ತಾಯಿ ಅಂತ್ಯಸಂಸ್ಕಾರ ನಂತರ ಹೆಚ್ ಡಿಕೆ ಸಂಕಲ್ಪ
ಹಾಸನ : ಸಕಲ ಸರ್ಕಾರಿ ಗೌರವದ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ಅಂತ್ಯಸಂಸ್ಕಾರ ನಿನ್ನೆ ಸೋಮವಾರ ಸಾಯಂಕಾಲ ಹಾಸನ ಜಿಲ್ಲೆಯ ಹೊಳೆನರಸೀಪುರದ ಮಾವಿನಕೆರೆಯಲ್ಲಿ ನೆರವೇರಿತು.
ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ ಜೋಶಿ, ಸಿಎಂ ಡಿಕೆ ಶಿವಕುಮಾರ್ ಆದಿಯಾಗಿ, ಹಲವು ನಾಯಕರು ಈ ವೇಳೆ ಹಾಜರಿದ್ದರು. ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ಕೂತು, ದೇವೇಗೌಡರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನ ಮುಗಿದ ನಂತರ, ಯಾವುದೋ ಒಂದು ಕಾರಣಕ್ಕೆ ನಾನು ಅಮ್ಮನ ಮನಸ್ಸನ್ನು ನೋಯಿಸಿರಬಹುದು, ಇನ್ನು ಮುಂದೆ ಯಾವುದೇ ತಪ್ಪಾಗುವುದಿಲ್ಲ, ನನ್ನಿಂದ ನೋವಾಗಿದ್ದರೆ ಕ್ಷಮಿಸಿಬಿಡು ತಾಯಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಳಿಕೊಂಡು ಮಾಧ್ಯಮದವರ ಮುಂದೆ ಕಣ್ಣೀರು ಹಾಕುತ್ತಾ ಸಂಕಲ್ಪ ಮಾಡಿದ ದೃಶ್ಯ ಮೈಕಲಕುವಂತಿತ್ತು. ಜೊತೆಗೆ, ತಾಯಿಯ ನಿಧನದ ಸಮಯದಿಂದ, ಅಂತಿಮ ಸಂಸ್ಕಾರದವರೆಗೆ, ಸರ್ಕಾರ ಕೊಟ್ಟ ಸಹಕಾರಕ್ಕೆ, ವಿಶೇಷವಾಗಿ ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ಧನ್ಯವಾದ ಹೇಳಿದರು.
ತಾಯಿ ಬದುಕಿದಂತೆ ಬದುಕುತ್ತೇನೆ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ
ತಾಯಿಯ ಅಂತಿಮ ಸಂಸ್ಕಾರದ ಕೆಲಸ ಮುಗಿದ ನಂತರ ಮಾತನಾಡಿದ ಕುಮಾರಸ್ವಾಮಿ, "ಹಿಂದಿನ ದಿನಗಳಲ್ಲಿ ಕೆಲವು ವಿಚಾರದಲ್ಲಿ ನನ್ನ ತಾಯಿಗೆ ನೋವು ಕೊಟ್ಟಿರಬಹುದು. ಮತ್ತೆ ಎಂದೂ ಅವರ ಆತ್ಮಕ್ಕೆ ನನ್ನಿಂದ ಅಪಚಾರ ಆಗದೇ ಇರತಕ್ಕಂತಹ ರೀತಿಯಲ್ಲಿ ನಾನು ಇರುತ್ತೇನೆ. ನನಗೆ ಭಗವಂತ ಕೊಟ್ಟ ವಯಸ್ಸು ಇರುವವರೆಗೂ, ಪ್ರತೀದಿನ ಪ್ರತೀ ಕ್ಷಣ, ನನ್ನ ತಾಯಿ ಯಾವ ರೀತಿ ಬದುಕ್ಕಿದ್ದರೋ, ಅದೇ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ನಾನು ಮಾಡಿದ್ದೇನೆ" ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ನಾನು ಅರಿತೋ, ಅರಿಯದೆಯೋ ಕೆಲವು ತಪ್ಪುಗಳನ್ನು ಮಾಡಿದ್ದೇನೆ, ನನ್ನಿಂದ ತಪ್ಪುಗಳಾಗಿ ನಿಮ್ಮ ಹೃದಯಕ್ಕೆ ನೋವು ಕೊಟ್ಟಿದ್ದರೆ ಕ್ಷಮಿಸುಬಿಡು ತಾಯಿ ಎಂದು ಬೇಡಿಕೊಂಡಿದ್ದೇನೆ. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿ ಮುನ್ನಡೆಯುತ್ತೇನೆ, ಅವರ ಆತ್ಮಕ್ಕೆ ನನ್ನಿಂದ ಅಪಚಾರವಾಗದಂತೆ ಜೀವನ ನಡೆಸುತ್ತೇನೆ, ನನಗೆ ನನ್ನ ತಾಯಿ ಹಲವಾರು ಬಾರಿ ಸಲಹೆ ಕೊಟ್ಟಿದ್ದಾರೆ, ಆ ಸಲಹೆಯನ್ನು ಭಗವಂತನೇ ನನ್ನಿಂದ ಶಾಂತಿ ಕೊಡಬೇಕೆಂದು ದಯಪಾಲಿಸಿದ್ದಾನೆ ಎಂದರು.
ನನ್ನ ತಾಯಿಗೆ ಸಂತೋಷವನ್ನೂ ಕೊಟ್ಟಿದ್ದೇನೆ, ದುಃಖವನ್ನೂ ಕೊಟ್ಟಿದ್ದೇನೆ, ಇನ್ನು ನಾನು ಮಣ್ಣಾಗುವವರೆಗೆ ಒಂದು ಚ್ಯುತಿ ಬರದ ರೀತಿಯಲ್ಲಿ ನನ್ನ ತಾಯಿಯ ರೀತಿ ನಡೆದುಕೊಳ್ಳಬೇಕೆಂದು ನನ್ನ ಸಂಕಲ್ಪ ಎಂದರು.